ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನುರಾಗ (ಭಾಗ-೨)

ಇಮೇಜ್
    .. ಕಥೆಯನ್ನು ಮುಂದುವರಿಸುತ್ತಾ        ಒಂದಲ್ಲ ಎರಡಲ್ಲ, ಎಂಬತ್ತೊಂಭತ್ತು ದಿನಗಳು, ಋತ್ವಿಕ್ ಇಹಲೋಕದ ಅರಿವಿಲ್ಲದೆ ಆಸ್ಪತ್ರೆಯ ಹಾಸಿಗೆಯ ‌ಮೇಲೆ ಮಲಗಿದ್ದ. ಅಷ್ಟರಲ್ಲಾಗಲೇ ಪ್ರತಾಪ್ ಮತ್ತು ಮೀನಾಕ್ಷಿ ದಂಪತಿಗಳು ತಮ್ಮ ಮಗ ಮತ್ತೆ ಮೊದಲಿನಂತಾಗುವನೆಂಬ ಆಸೆಯನ್ನೇ ಅರ್ಧ ತ್ಯಜಿಸಿದರು.  ಅದ್ಯಾವ ಜನ್ಮದ ಪುಣ್ಯವೋ, ಅದ್ಯಾವ ದೇವರು ಹರಕೆಗೆ ಒಲಿದನೋ! ವೈದ್ಯರು ತೊಂಬತ್ತನೇ ದಿನ "ನಿಮ್ಮ ಮಗನಿಗೆ ಪ್ರಜ್ಞೆ ಬಂದಿದ್ದು, ಕೋಮಾದಿಂದ ಹೊರಬಂದಿದ್ದಾರೆ. ಅವರಿಗೆ ಮರುಜನ್ಮ ‌ದೊರಕಿದೆ. ದೇವರು ನಿಮ್ಮ ಕೈಬಿಡಲಿಲ್ಲ ಎಂದರು". ಪ್ರತಾಪ್ ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ನೆನೆದು ವೈದ್ಯರಿಗೆ ತಲೆಬಾಗಿ ನಮಿಸಿದರು. ಮಗನನ್ನು ನೋಡುವ ತವಕದಲ್ಲಿ ಋತ್ವಿಕ್ ಬಳಿ ಓಡೋಡಿ ಹೋದ ದಂಪತಿಗಳಿಗೆ ಮತ್ತೊಂದು ಆಘಾತ ಕಾದಿತ್ತು. ಮಗ ಅಪ್ಪ-ಅಮ್ಮನನ್ನೇ ಗುರುತು ಹಿಡಿಯದೇ ಚೀರಾಡಿದ.  ಮತ್ತೆ ದುಃಖದಿಂದ ವೈದ್ಯರ ಬಳಿ ಓಡಿ "ಏನಾಗಿದೆ ಋತ್ವಿಕ್ ಗೆ " ಎಂದು ಕೇಳಿದಾಗ, ವೈದ್ಯರು "ನಿಮ್ಮ ಮಗನಿಗೆ ಮೆದುಳಿಗೆ ಅಪಘಾತದಲ್ಲಿ ಗಂಭೀರವಾಗಿ ಪೆಟ್ಟಾಗಿದೆ. ಇದನ್ನು ಟಿಬಿಐ (ಟ್ರಾಮ್ಯಾಟಿಕ್ ಬ್ರೈನ್ ಇಂಜುರಿ) ಎನ್ನುತ್ತೇವೆ. ಅಂದರೆ ಮೆದುಳಿಗಾದ ತೀವ್ರ ಗಾಯ ಎನ್ನಬಹುದು. ಇದರಿಂದಲೇ ಋತ್ವಿಕ್ ಸುಮಾರು ಮೂರು ತಿಂಗಳುಗಳ ಕಾಲ ಕೋಮಾಗೆ ಜಾರಿದ್ದು.  ಎರಡನೇ ಹಂತದ ಟಿಬಿಐಯಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ತುಂಬಾ ಹದಗೆಡಬಹುದು. ಹೆಚ್ಚಿನವರು ಖಿನ

ಅನುರಾಗ (ಭಾಗ ೧)

ಇಮೇಜ್
  ಸಿರಿವಂತ, ಗುಣವಂತ ಪ್ರತಾಪ್ ಮತ್ತು ಮೀನಾಕ್ಷಿ ದಂಪತಿಯ ಒಬ್ಬನೇ ಪುತ್ರ ಋತ್ವಿಕ್. ತಂದೆ-ಮಗ ಇಬ್ಬರೂ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ಸ್. ತಮ್ಮ ಊರಿನ ಹಲವಾರು ಸುಂದರ ಮನೆಗಳು, ಕಟ್ಟಡಗಳ ನಿರ್ಮಾಣದಲ್ಲಿ ಮಹತ್ತರ ಕೊಡುಗೆದಾರರಾಗಿದ್ದರು.  ಇಪ್ಪತ್ತೈದರ ಸುಂದರ, ಸಾಧಾರಣ ಮೈಕಟ್ಟಿನ ಋತ್ವಿಕ್ ಮೇಲೆ ಹಲವಾರು ಹೆಣ್ಣುಮಕ್ಕಳ, ಹೆಣ್ಣುಹೆತ್ತವರ ಕಣ್ಣು ಅದಾಗಲೇ ಬಿದ್ದಿತ್ತು. ಆದರೆ ಋತ್ವಿಕ್ ಇನ್ನೂ ಒಂದೆರೆಡು ವರುಷಗಳು ಮದುವೆಯ ವಿಚಾರ ತೆಗೆಯದಿರುವಂತೆ ಹೆತ್ತವರಿಗೆ ತಿಳಿಸಿದ್ದ.  ಅಂದು ಶನಿವಾರ, ಮುಸ್ಸಂಜೆ ಪ್ರತಾಪ್ ಮತ್ತು ಮೀನಾಕ್ಷಿಯವರು ಮನೆಯ ಹೂದೋಟದ ಬಳಿ ಮಾತನಾಡುತ್ತಿರುವಾಗ ಫೋನ್ ರಿಂಗಣಿಸಿತು. ಫೋನ್ ಕಿವಿಗಿರಿಸಿದ ಪ್ರತಾಪ್ಗೆ ಬಹುದೊಡ್ಡ ಆಘಾತ ಕಾದಿತ್ತು. ಮನೆಗೆ ಕಾರಿನಲ್ಲಿ ಬರುತ್ತಿದ್ದ ಋತ್ವಿಕ್ಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದು ತಿಳಿದುಬಂತು. ಭಯ, ದುಃಖ ಒಮ್ಮೆಲೇ ಉಮ್ಮಳಿಸಿ ಬಂತು. ಇಬ್ಬರೂ ಕೂಡಲೇ ಆಸ್ಪತ್ರೆಗೆ ಧಾವಿಸಿದರು.  ಅರ್ಧಗಂಟೆಯ ನಂತರ ತುರ್ತು ನಿಗಾ ಘಟಕದಿಂದ ಹೊರಬಂದ ವೈದ್ಯರು, ಋತ್ವಿಕ್ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು ಕೋಮಾಗೆ ಜಾರಿರುವುದಾಗಿ‌ ತಿಳಿಸಿದರು. ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು ಪ್ರತಾಪ್ ದಂಪತಿಗೆ. ಯಾವ ದೇವರಿಗೆ ಹರಕೆ ಕಟ್ಟುವುದು, ಯಾವ ದೇವರಲ್ಲಿ ಮೊರೆ ಹೋಗುವುದು ಎಂಬುದೂ ತಿಳಿಯದಾಗಿತ್ತು. ಬದುಕಿ ಬಾಳಬೇಕಾದ ಮಗ ಹೀಗೆ ಕಣ್ಣಮುಂದೆ ಮಲಗಿರುವುದು ನೋಡಿ, ನಮಗೆ ಹೀಗಾಗ

ಸಮಯದ ಸದುಪಯೋಗ

ಕಾವ್ಯ ಶಾಸ್ತ್ರ ವಿನೋದೇನ  ಕಾಲೋ ಗಚ್ಛತಿ ಧೀಮತಾಮ್ । ವ್ಯಸನೇನ ತು ಮೂರ್ಖಾಣಾಂ  ನಿದ್ರಯಾ ಕಲಹೇನ ವಾ ॥ ಎಂಬ ಸಂಸ್ಕೃತ ಸುಭಾಷಿತದಂತೆ, ಬುದ್ಧಿವಂತರಾದವರು ಕಾವ್ಯ,ಶಾಸ್ತ್ರಗಳನ್ನು ಓದುವ ಮೂಲಕ ಸಂತಸಪಡುತ್ತಾ ಸಮಯವನ್ನು ಕಳೆದರೆ, ಮೂರ್ಖರಾದವರು ಜಗಳವಾಡುವುದರ ಮೂಲಕ, ದುಶ್ಚಟಗಳನ್ನು ಬೆಳೆಸಿಕೊಳ್ಳುವುದರ ಮೂಲಕ, ನಿದ್ರೆಯನ್ನು ಮಾಡುವುದರ ಮೂಲಕ ಸಮಯವನ್ನು ಕಳೆಯುತ್ತಾರೆ. ಯಾವುದು ಉತ್ತಮ? ನಾವು ಬುದ್ಧಿವಂತರೋ, ಮೂರ್ಖರೋ? ಯೋಚಿಸಿ, ಸ್ನೇಹಿತರೆ!              ಸಮಯವು ಅತ್ಯಂತ ಮಹತ್ವಪೂರ್ಣವಾದದ್ದು, ಅಮೂಲ್ಯವಾದದ್ದು. ಒಮ್ಮೆ ಕಳೆದುಹೋದ ಸಮಯ ಏನು ಮಾಡಿದರೂ ಮರಳಿ ಬರುವುದಿಲ್ಲ. ಸಮಯ ಸಿಕ್ಕಾಗಲೆಲ್ಲ ಒಂದೇ ಸಮನೆ ಹರಟೆ ಹೊಡೆಯುವವರ ಸಮಯ ನಿರರ್ಥಕ. ಉಪಯುಕ್ತ ಮಾತುಕತೆಗಳಲ್ಲಿ ತೊಡಗುವವರ ಸಮಯ ಸಾರ್ಥಕ. ಸಮಯವು ಹಣಕ್ಕಿಂತಲೂ ಶ್ರೇಷ್ಠವಾದುದು ಎನ್ನುವವರಿದ್ದಾರೆ. ಆಲೋಚಿಸಿ ನೋಡಿದರೆ ಎರಡೂ ಶ್ರೇಷ್ಠ. ಸಮಯವನ್ನು ಸದುಪಯೋಗಪಡಿಸಿಕೊಂಡರೆ ಹಣ ಗಳಿಸಬಹುದು. ಹಣವನ್ನು ಸದುಪಯೋಗಪಡಿಸಿಕೊಂಡರೆ ಸಮಯ ಉಳಿಸಬಹುದು. ಆದರೆ ಎಲ್ಲಕ್ಕಿಂತ ಮೊದಲು ನಮ್ಮಲ್ಲಿ ಸದುಪಯೋಗಪಡಿಸಿಕೊಳ್ಳುವ ಬುದ್ಧಿ ಬೇಕು ಅಲ್ಲವೇ ಮಿತ್ರರೇ?              ಒಬ್ಬ ವ್ಯಕ್ತಿಯ ಹಣ ಕಳೆದುಹೋದಾಗ ವ್ಯಥೆ ಪಡುವಷ್ಟು , ಅವರ ಸಮಯ ನಷ್ಟವಾಯಿತೆಂದು ದುಃಖಿಸುವವನು ಸಾವಿರಕ್ಕೊಬ್ಬನೂ ಇಲ್ಲ. ಮಾಡಿದ ಕೆಲಸವೊಂದು ಕೆಟ್ಟು ಹೋದಾಗ ತಲೆಗೆ ಕೈಕೊಟ್ಟು ಚಿಂತಿಸುತ್ತಾ ಕುಳಿತುಕೊಳ್ಳುವುದರ ಬದಲು ಅ

ಸಣ್ಣ ಕಥೆ- ೩

ದೇಶಪ್ರೇಮ! ಸಾವಿತ್ರಮ್ಮ ಹಾಗೂ ವಾಸುದೇವರಿಬ್ಬರಿಗೂ ದೇಶದ ಮೇಲೆ ಅಪಾರ ಗೌರವ. ಅವರ ಏಕೈಕ ಪುತ್ರ ಕಿರಣ್. ಬಾಲ್ಯದಿಂದಲೇ ಅವನಲ್ಲೂ ದೇಶಾಭಿಮಾನ ಮೂಡಿಸಿ, ಆತ ಸೇನೆಗೆ ಸೇರಲು ಕಾರಣವಾಗಿದ್ದು ಇವರೇ. ಅನೇಕ ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿದ ಮಗ ಕಿರಣ್ಗೆ ಮದುವೆ ಮಾಡಬೇಕೆಂದು ತೀರ್ಮಾನಿಸಿದರು. ಮದುವೆ ಆಯಿತು. ಆತನ ಪತ್ನಿ ರಮ್ಯಾ ಗರ್ಭಿಣಿಯಾದಳು. ಸೇನೆಯಿಂದ ಕರೆ ಬಂದ ನಿಮಿತ್ತ, ಕಿರಣ್ ಮತ್ತೆ ದೇಶದ ಸೇವೆಗಾಗಿ ತೆರಳಿದ. ಹತ್ತಾರು ಆಸೆಗಳನ್ನು ಹೊತ್ತು, ಪತಿಯ ಭಾವಚಿತ್ರ ಹಿಡಿದು, ಹಗಲುಗನಸು ಕಾಣುತ್ತಿದ್ದಳು. ನವ ಮಾಸ ತುಂಬಿ, ಹಡೆದು, ಗಂಡು ಮಗುವನ್ನು ಮಡಿಲಲ್ಲಿ ಹಿಡಿದಿದ್ದಳಾಕೆ. ಮನೆಯಲ್ಲಿ ಸಂತಸದ ವಾತಾವರಣ. ಹಲವಾರು ವರ್ಷಗಳ ನಂತರ ಸಿಕ್ಕ ಸಂಭ್ರಮವದು. ಮನೆಯವರು ವಿಷಯವನ್ನು ತಿಳಿಸಿದ್ದರೂ, ಕಿರಣ್ಗೆ ತುರ್ತು ಕಾರ್ಯದ ನಿಮಿತ್ತ ಬರಲಾಗಲಿಲ್ಲ. ಎಲ್ಲರೂ ಸಂಭ್ರಮಾಚರಣೆಯಲ್ಲಿರುವಾಗಲೇ ಕರೆ ಬಂದಿತು. ಗಡಿಯಲ್ಲಿ ಆದ ಆಕ್ರಮಣದಲ್ಲಿ ಕಿರಣ್ ಹೋರಾಡಿ, ವೀರಮರಣ ಹೊಂದಿದ್ದ. ಸಂತಸದ ಕ್ಷಣಕೆ ವಿಧಿ ಕಪ್ಪು ಚುಕ್ಕೆ ಇಟ್ಟಿತ್ತು. ಮೊಮ್ಮಗನ ಜನನದಿಂದ ಖುಷಿ ಪಡಬೇಕೋ, ಮಗ ನಿಧನ ಹೊಂದಿದ ಎಂದು ದುಃಖ ಪಡಬೇಕೋ, ಶತ್ರುಗಳ ವಿರುದ್ಧ ಹೋರಾಡಿ, ತನ್ನ ದೇಶವನ್ನು ಗೆಲ್ಲಿಸಿ, ಮರಣ ಹೊಂದಿದ ಎಂದು ಹೆಮ್ಮೆ ಪಡಬೇಕೋ ತಿಳಿಯದೆ ವಾಸುದೇವ ದಂಪತಿಗಳು ಮೌನಕ್ಕೆ ಜಾರಿದರು. ಇತ್ತ ಏನೂ ಅರಿಯದ ಕಂದಮ್ಮ, ಅಮ್ಮನ ಮಡಿಲಲ್ಲಿ ಕಿಲಕಿಲನೆ ನಗುತ್ತಾ ಆಡುತ್ತಿತ್ತು. ಅದನ್

ಶುನಕದ ಸಾಂಗತ್ಯ

ಇಮೇಜ್
ಸಂಕಟದ ಮಡುವಲಿ ಮೂಕೀಭಾವದಲಿ ನಾನಿರಲು ಸಹಾನುಭೂತಿಯ ಖಣಿಯಾಗಿ ಶುನಕವು ಸಾಂಗತ್ಯವಾಯ್ತು.. ನೀರವತೆಯ ನರ್ತನದಲಿ ಮನಶೈತ್ಯ ಬಯಸುತಿರಲು ವಿಧೇಯತೆಯ ಅನ್ವರ್ಥವಾಗಿ ನನ್ನ ಮನವ ಗೆದ್ದಿತು... ಅರ್ಥೈಸಿಕೊಂಡಂಥ ಭಾವದಲಿ ಮೌನದಲೇ ಸಾಂತ್ವಾನಿಸುತಿರಲು ಮೂಕಪ್ರಾಣಿ ಶುನಕವು ನನ್ನ ಪ್ರಾಣ ಸ್ನೇಹಿಯಾಯ್ತು.. ತಿರುಗಿದಲ್ಲಿ ಹಿಂಬಾಲಿಸಿ  ನನಗೆ ಒರಗಿ ಕುಳಿತಿರಲು ಕೊರಗೂ ಕರಗಿ ಹೋಗಿ ಮೊಗದಲಿ ನಗು ಮೂಡಿಸಿತು.. ಮನುಜರಿಗಿಂತ ಶುನಕಗಳೇ ನಂಬಲರ್ಹ ಎನಿಸಿರಲು, ಕೊಟ್ಟ ನಾಲ್ಕು ತುತ್ತಿಗೂ ಸಾರ್ಥಕ್ಯ ಭಾವ ಮೂಡಿತು..

ಇಂಟರ್ನೆಟ್ ಎಂಬ ಮಾಯಾಲೋಕ

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು। ಹೊಸ ಯುಕ್ತಿ ಹಳೆ ತತ್ವ ಕೂಡಿರಲು ಧರ್ಮ ॥ ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ। ಜಸವು ಜನ ಜೀವನಕೆ ಮಂಕುತಿಮ್ಮ ॥ ಹೌದು, ವಿಜ್ಞಾನದಲ್ಲಿ ದಿನಕ್ಕೊಂದು ಆವಿಷ್ಕಾರವಾಗುತ್ತಲೇ ಇದೆ. ಇಂದು ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ, ವಿವರಿಸಲು ಪುಸ್ತಕಗಳೇ ಸಾಲದು. ನಾವಿಂದು ಆಧುನಿಕ ಜಗತ್ತಿನಲ್ಲಿದ್ದೇವೆ. ಪ್ರತಿಯೊಂದಕ್ಕೂ ಯಂತ್ರಗಳನ್ನು ಅವಲಂಬಿಸಿ, ಒಟ್ಟಾರೆ ಯಾಂತ್ರೀಕೃತ ಬದುಕನ್ನು ಸಾಗಿಸುತ್ತಿದ್ದೇವೆ. ಆದರೆ ಇದರ ಸಾಧಕ-ಬಾಧಕಗಳೆಷ್ಟು? ನಮ್ಮ ಜೀವನ ಇಂದು ಎತ್ತಕಡೆಗೆ ಸಾಗಿದೆ? ಒಂದು ಬಾರಿ ಯೋಚಿಸಿದರೆ, ಅಯ್ಯೋ! ನಾವು ಹೀಗಿದ್ದೇವೆಯೇ? ಎಂದೆನಿಸುತ್ತದೆ. ಇಂದು ಪ್ರತಿಯೊಬ್ಬರ ಬಳಿಯೂ ಸರ್ವೇಸಾಮಾನ್ಯವಾಗಿ ಇರುತ್ತದೆ- ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ನಂತಹ ಸಾಧನಗಳು. ಹಿಂದೆ ಕರೆ ಮಾಡಲು ಮಾತ್ರ ಉಪಯೋಗಿಸುತ್ತಿದ್ದ ಮೊಬೈಲ್ನ ದುಷ್ಪರಿಣಾಮ ಇಂದು ಎಷ್ಟು? ತಂತ್ರಜ್ಞಾನ ಮತ್ತಷ್ಟು ಮುಂದುವರಿಯಲು ಕಾರಣವಾದ ಕಂಪ್ಯೂಟರ್ನಂತಹ ಸಾಧನಗಳು ಇಂದು ನಮ್ಮನ್ನು ಯಾವ ಕೂಪಕ್ಕೆ ತಳ್ಳಿವೆ? ದಿನೇದಿನೇ ಹೆಚ್ಚುತ್ತಿರುವ ಅತ್ಯಾಚಾರಗಳಂತಹ ಅಮಾನುಷ ಕೃತ್ಯಗಳಿಗೆ ಕಾರಣ ಯಾವುದು? ಉತ್ತರ ಎಲ್ಲಿದೆ?..... ಹೌದು, ಒಮ್ಮೆಯಾದರೂ ಚಿಂತಿಸಬೇಕು. ಚಿಂತಿಸಿದರೆ ಸಾಲದು, ಪರಿಹಾರ ಹುಡುಕಬೇಕು. ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ತಿಳಿಸುವ ಇಂಟರ್ನೆಟ್ ಎಷ್ಟೋ ಅನಾಹುತಗಳಿಗೆ ರಹದಾರಿಯಾಗಿದೆ. ಎಷ್ಟೋ ಜನರ ಜೀವ

ಕಿವುಡಿಯ ದೌರ್ಭಾಗ್ಯ

ಸೌಂದರ್ಯ ನೋಡಿ ಪ್ರತಿಭೆ ಗುರುತಿಸುತ್ತಿದ್ದೆನಲ್ಲ, ನಿನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟಿದ್ದೆನಲ್ಲ ಅದಕ್ಕಾಗಿ ನನ್ನ ಕ್ಷಮಿಸುವೆಯಲ್ಲಾ? ನನ್ನ ನಲ್ಮೆಯ ಮುದ್ದು ಕೋಗಿಲೆ.. ನಿನ್ನ ಹಾಡನ್ನು ಕೇಳುವ ಭಾಗ್ಯ ನನಗಿಲ್ಲ ಆದರೂ ನಿನ್ನ ನೋಡುವ ಸೌಭಾಗ್ಯ ನನಗಿದೆಯಲ್ಲ! ಅದರಲ್ಲೇ ಸಂತಸಪಡಬೇಕಲ್ಲಾ, ನನ್ನ ನಲ್ಮೆಯ ಮುದ್ದು ಕೋಗಿಲೆ.. ನಿನ್ನ ಹಾಡಿಗೆ ಮಾರುಹೋಗದವರಿಲ್ಲ, ಅದ ನೋಡಿ ಸಾಕಷ್ಟು ನೊಂದಿಹೆನಲ್ಲ.. ಕಿವಿಯಿದ್ದರೂ ಕೇಳಲಾಗದಲ್ಲಾ.! ನನ್ನ ನಲ್ಮೆಯ ಮುದ್ದು ಕೋಗಿಲೆ.. ಈ ನನ್ನ ಪಾಡನ್ನು ಯಾರಿಗೆ ಹೇಳಲಿ? ನಿನ್ನ ಮಧುರ ಕಂಠವ ನಾ ಹೇಗೆ ಕೇಳಲಿ? ನನ್ನ ಭಾವನಾಂತರಾಳದಲ್ಲಿರುವ ನಿನ್ನ ನೋಡಿಯೇ  ಆನಂದಿಸುವೆ ನಾ, ನನ್ನ ನಲ್ಮೆಯ ಮುದ್ದು ಕೋಗಿಲೆ..

ಬದುಕು ಬದಲಾಗಿದೆ

ಇಮೇಜ್
 ಬದುಕು ಬದಲಾಗಿದೆ, ನಾ ಬಯಸುವ ಹಾಗೆ ಹೊರಗಲ್ಲ, ನನ್ನೊಳಗೆ! ಕಾಡುವ ಒಂಟಿತನವಿಲ್ಲ, ಬೇಸರಕೆ ಕಾರಣಗಳಿಲ್ಲ ಖುಷಿಯ ವಿನಹ, ಬೇರೇನಿಲ್ಲ! ಕಣ್ತೆರೆದರೆ ಹಸಿರಿದೆ, ಸ್ವಚ್ಚಂದಚ್ಛಂದ ಮನಸಿದೆ ಆದರೂ, ಕಾಡುವ ಭಯವಿದೆ! ಮತ್ತೆ ಬೆಂಗಾಡ ಸೇರಲು, ಮನಸೊಲ್ಲದ ಬಾಳಿಗೆ ಬೆಂಡಾಗಲು ನಗುವಲ್ಲದ ನಗುವ, ಹೊತ್ತೊಯ್ಯಲು!

ಹೆಣ್ಣು...ಅಬಲೆಯಲ್ಲ, ಸಬಲೆ!

ಇಮೇಜ್
              "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:" - ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಭಾವನೆಯನ್ನು ಪ್ರಾಚೀನ ಕಾಲದಿಂದಲೂ ಹೊಂದಿದ ನಾಡು ನಮ್ಮದು. "ಗೃಹಿಣೀ ಗೃಹಮುಚ್ಯತೇ" ಎಂಬಂತೆ ಕುಟುಂಬ, ಸಮಾಜ, ದೇಶ, ವಿಶ್ವ ಹೀಗೆ ಎಲ್ಲಾ ಕಡೆ ಸ್ತ್ರೀಗೆ ಉತ್ತಮ ಸ್ಥಾನಮಾನವಿತ್ತು. ಪ್ರಾಚೀನ ಭಾರತದಲ್ಲಿ ಗಾರ್ಗಿ, ಮೈತ್ರೇಯೀ ಮುಂತಾದ ಅನೇಕ ಸ್ತ್ರೀ ತತ್ವಜ್ಞಾನಿಗಳಿದ್ದರು. ಅಂದಿನ ಸಮಾಜವು ಸ್ತ್ರೀಯನ್ನು ತುಂಬಾ ಗೌರವದಿಂದ ಕಾಣುತ್ತಿದ್ದು, ಸ್ತ್ರೀ ಎಲ್ಲಾ ಸ್ವಾತಂತ್ರ್ಯವನ್ನು ಹೊಂದಿದ್ದಳು. ಇನ್ನು ಕುಟುಂಬ ವ್ಯವಸ್ಥೆಯಲ್ಲಿ, ಮಕ್ಕಳನ್ನು ಹಡೆಯುವ, ಪೋಷಿಸುವ, ಜ್ಞಾನ ನೀಡುವ, ಗೃಹಕೃತ್ಯಗಳಲ್ಲಿ ತೊಡಗುವ ಮಹತ್ವದ ಕಾರ್ಯ ಬಾಹುಳ್ಯವನ್ನು ಮಹಿಳೆ ಹೊಂದಿದ್ದಳು. "ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು"..ಈ ಜಾನಪದೀಯ ಹೇಳಿಕೆಯು ಮಹಿಳೆಯನ್ನು ಇನ್ನಷ್ಟು ಎತ್ತರಿಸುತ್ತದೆ. ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. "ಹೇ ನಾರಿ, ನಿನಗ್ಯಾರೆ ಸಾಟಿ ಈ ಜಗದಲ್ಲಿ!" ಎನ್ನುವಂತೆ, ಎಂತಹ ಕೆಲಸವನ್ನೇ ಆಗಲಿ, ಪುರುಷನಷ್ಟೇ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು. ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆ. ಆಧುನಿಕ ಯುಗದಲ್ಲಿ ರಿಕ್ಷಾ ಚಾಲನೆಯಿ

ಮಕ್ಕಳ ಪದ್ಯ- ಗೂಡುಬಿಟ್ಟ ಗುಬ್ಬಚ್ಚಿಮರಿ

ಗೂಡಿಂದ ಹೊರಬಂದ ಗುಬ್ಬಚ್ಚಿಮರಿ ನಾನು, ಅತ್ತೆ-ಮಾವ, ಅಜ್ಜಿ-ಅಜ್ಜ ಯಾರೂ ಇಲ್ಲ ದೊಡ್ಡಬಂಗಲೆ, ಮೈದಾನ ಇಲ್ಲಿ, ಆದರೂ ಆಡಲು ಅಣ್ಣ-ತಮ್ಮ, ಅಕ್ಕ-ತಂಗೀರಿಲ್ಲ ಬೆಳದಿಂಗಳ ರಾತ್ರೀಲಿ, ಆಗಸದ ಚಪ್ಪರದಡಿ, ಅಜ್ಜಿಯ ಕೈತುತ್ತು ಊಟಕ್ಕೆ ಸರಿಸಮವಿಲ್ಲ ಬೆಳ್ಳಿಬಟ್ಟಲು, ಬಗೆಬಗೆ ತಿನಿಸು, ಇದ್ದರೂ ಇಲ್ಲಿ  ಊಟಕ್ಕೆ ರುಚಿಯೇ ಇಲ್ಲ ದೊಡ್ಡಪ್ಪ ತರುತ್ತಿದ್ದ ಮಿಠಾಯಿ-ಬತ್ತಾಸು, ನಿದ್ರಿಸಲು ಅಜ್ಜಿಯ ಬಗೆಬಗೆ ಕತೆಗಳು ಮನೆ ಚಿಕ್ಕದಾದರೂ ಖಾಲಿಯಲ್ಲ, ಅಲ್ಲಿ ಮನಸು ಮುದುಡಿದ ಕ್ಷಣವೇ ಇಲ್ಲ ಗೂಡಿಂದ ಹೊರಬಂದ ಗುಬ್ಬಚ್ಚಿಮರಿ ನಾನು, ಭೂತದಬಂಗಲೆಯೊಳ ಹೊಕ್ಕಂತಿದೆ ಅಪ್ಪ-ಅಮ್ಮ ಇಲ್ಲಿ, ಮತ್ತೇ ಅದೇ ಮೌನ ವಿಭಕ್ತತೆಯ ಬೇಸರ ಮಡುಗಟ್ಟಿದೆ

ನನ್ನ ಕನಸಿನ ಭಾರತ

ಇಮೇಜ್
ಚಿತ್ರ: ವೈಷ್ಣವಿ ಕೆ  ಭ್ರಾತೃತ್ವದ ಬೀಜ ಬಿತ್ತಿ  ಸದ್ಧರ್ಮವ ಪಸರಿಸಿ ತಿಕ್ತತೆಯ ತೊಡೆದು ಹಾಕಿ ಸುಧೆ ನೀಡಲಿ ಭಾರತ.. ಸಾಕ್ಷರತೆಯ ಮಡಿಲಿನಲಿ ಮಾನವತೆಯ ಗುಡಿಯಲಿ ಹಿತಮಿತದ ಅರಿವಿನಲಿ ಸತ್ಕರ್ಮ ಮಾಡಲಿ ಭಾರತ.. ದಾರಿದ್ರ್ಯದ ನಿರ್ಮೂಲದಲಿ ಅನಾಚಾರಗಳ ಅಂತ್ಯದಲಿ ಮತಭೇದಕೆ ಎಡೆಗೊಡದೆ ಐಕ್ಯತೆಯಿಂದಿರಲಿ ಭಾರತ.. ಪ್ರಕೃತಿಯ ರಕ್ಷಣೆಯಲಿ ಪ್ರೀತಿ-ದಯೆ-ಶಾಂತಿಯಲಿ ಏಳ್ಗೆಯ ಪಥದಿ ಸಾಗಿ ಜಗದ್ಗುರುವಾಗಲಿ ಭಾರತ..

ನಿರೀಕ್ಷೆ

ಇಮೇಜ್
ಚಿತ್ರ: ವೈಷ್ಣವಿ ಕೆ   ನಿನ್ನ ಬರುವಿಕೆಯ ನಿರೀಕ್ಷೆಯಲಿ, ಈ‌ ಬದುಕಿನ ಪರೀಕ್ಷೆಯಲಿ, ಬಸವಳಿದಿದೆ ಆ ಮನಸು.. ಬರಿದಾಗಿಹ ಕನಸುಗಳಲಿ, ಬೆದರಿಸುವ ಭ್ರಮೆಯಲಿ, ಬೆಂಗಾಡಾಗಿದೆ ಆ ಮನಸು.. ಮಾಯಾವಿ... ಬೆತ್ತಲಲ್ಲ ಬದುಕು, ಕತ್ತಲಲ್ಲ ಕನಸು ನಿಜವಾದರೆ,,, ಆ ಮನಸ ಕೊಲ್ಲದಿರು ನಿರೀಕ್ಷೆಗೆ ನಿರುತ್ತರ ನೀಡದಿರು... 

ಸಣ್ಣ ಕಥೆ-೨

ಇಮೇಜ್
ಚಿತ್ರ: ವೈಷ್ಣವಿ ಕೆ  ಪ್ರವಾಸ   "ನಾವು ಪ್ರವಾಸಕ್ಕೆ ಬಂದಿರುವುದು" ಎಂಬ ಪರ ಊರಿನವರ ಸಂಭಾಷಣೆಯನ್ನು ಕೇಳಿ, ಅಲೆಮಾರಿ ಜನಾಂಗದ ಮಗುವೊಂದು ತಾಯಿಯ ಬಳಿ ಬಂದು,  "ಅಮ್ಮ, ಪ್ರವಾಸ ಅಂದ್ರೆ ಏನು?" ಕೇಳಿತು. "ಅದೇ ಪುಟ್ಟ, ನಾವು ಒಂದೂರಿಂದ ಇನ್ನೊಂದು ಊರಿಗೆ ಹೋಗ್ತೀವಲ್ಲ, ಅದನ್ನೇ ದೊಡ್ಡ ಮನುಷ್ರು ಪ್ರವಾಸ ಅಂತಾರೆ. ನಾವು ಪಾದಯಾತ್ರೆ ಮಾಡಿದ್ರೆ, ಅವ್ರು ರಥಯಾತ್ರೆ ಮಾಡ್ತಾರೆ. ನಾವು ಹೊಟ್ಟೆಪಾಡಿಗಾಗಿ ಹೋದ್ರೆ, ಅವ್ರು ಖುಷಿಗಾಗಿ ಹೋಗ್ತಾರೆ ಅಷ್ಟೇ ಮಗಾ...!" ಎಂದು ಹೇಳಿ ಮುಗಿಸುವಷ್ಟರಲ್ಲಿ ತಾಯಿಗರಿವಿಲ್ಲದೆ, ಅವಳ ಕಣ್ಣಂಚು ಒದ್ದೆಯಾಗಿತ್ತು.

ರಂಗೋಲಿ

ಇಮೇಜ್
ಚುಕ್ಕಿ ಚುಕ್ಕಿ ಚಿತ್ತಾರ ರೇಖೆಗಳಲಿ ಮೂಡೋ ಆಕಾರ ಬಣ್ಣದಲೂ ಚೆಂದ ಬಿಳಿಯಲೂ ಅಂದ ರಂಗೋಲಿಯ ಚಮತ್ಕಾರ || ಭಾರತದ ಸಂಸ್ಕೃತಿ ಕಲಿಸುವ ವಿದ್ಯೆ, ಸಂಸ್ಕಾರ ಒಂದಲ್ಲ, ಎರಡಲ್ಲ. ಪ್ರತಿಯೊಬ್ಬರಲ್ಲೂ ರಕ್ತಗತವಾಗಿದೆ ಅನೇಕಾನೇಕ ರತ್ನದಂತಹ ಕಲೆಗಳು. ಇದರಲ್ಲಿ ರಂಗೋಲಿಯೂ ಒಂದು. ಈ ರಂಗೋಲಿ ಕಲೆಯೂ, ವಿದ್ಯೆಯೂ, ತಪಸ್ಸೂ ಹೌದು. ರಂಗೋಲಿ ಪುಡಿಯಲ್ಲಿ ರೇಖೆಗಳನ್ನೆಳೆಯುವುದು ಸುಲಭದ ಮಾತೇನಲ್ಲ. "ರಂಗೋಲಿ ಹಾಕಲು ತಿಳಿಯದಿದ್ದರೂ, ಹೊಂಗರಿಕನ ಕೆತ್ತೆ ತೆಗೆಯಲಿಕ್ಕೆ ತಿಳಿಯದೇ?" ಎಂಬ ಮಾತೇ ಇದೆ. ಆದರೆ, ಮೂಡುವ ಚಿತ್ತಾರವ ನೋಡುವುದರಲ್ಲಿ ಕಳೆದುಹೋಗುವುದು ಸುಳ್ಳಲ್ಲ. ರಂಗೋಲಿ ಎಂದರೆ ಬಣ್ಣಗಳಿಂದ ಭಾವನೆಗಳನ್ನು ವ್ಯಕ್ತಪಡಿಸುವುದು. ಇದನ್ನು ಕರ್ನಾಟಕದಲ್ಲಿ ರಂಗವಲ್ಲಿ, ರಂಗಾಲಿ, ಚಿತ್ತಾರ ಎಂದೂ ಕರೆಯುತ್ತಾರೆ. ರಂಗೋಲಿಯನ್ನು ಆಂಧ್ರದ ಕೆಲವು ಭಾಗಗಳಲ್ಲಿ ಮುಗ್ಗು ಎಂದೂ, ತಮಿಳುನಾಡಿನಲ್ಲಿ ಕೋಲಮ್ ಎಂದೂ, ರಾಜಸ್ಥಾನದಲ್ಲಿ ಮಾಂಡನಾ, ಛತ್ತೀಸಗಢದಲ್ಲಿ ಛೋವಕಪುರಾಣ, ಪಶ್ಚಿಮ ಬಂಗಾಳದಲ್ಲಿ ಅಲ್ಪನಾ, ಒಡಿಸ್ಸಾದಲ್ಲಿ ಮೂರ್ಝಾ ಅಥವಾ ಝೋಟೀ, ಬಿಹಾರದಲ್ಲಿ ಆರಿಪನಾ, ಉತ್ತರಪ್ರದೇಶದಲ್ಲಿ ಚೌಕಪೂಜನಾ ಎಂದೂ, ಪೂಕಳಮ್‌ ಎಂದು ಕೇರಳದಲ್ಲೂ, ಭಾರ್ತಿ‌ ಎಂದು ಮಹಾರಾಷ್ಟ್ರದಲ್ಲೂ, ಗಹುಲಿ ಎಂದು ಗುಜರಾತಿನಲ್ಲೂ, ಏಪಣ್‌ ಎಂದು ಉತ್ತರಾಖಂಡದಲ್ಲೂ ಕರೆಯುತ್ತಾರೆ.  ರಂಗೋಲಿಯನ್ನು ಮನೆಯ ಎದುರು ಹಾಕುವುದರಿಂದ ಅದು ಕೆಟ್ಟದ್ದನ್ನು ತನ್ನೊಳಗೆ ಸೆಳೆದು, ಮನೆಯೊಳಗೆ ಹ

ಕನಸು

ಇಮೇಜ್
ಕನಸಿನ ಕಮ್ಮರಿ ಧುಮ್ಮಿಕ್ಕಿ ಕಮನೀಯ ಕಣ್ತಂಪನಿಕ್ಕಿ ಕನವರಿಕೆಯ ಕಣಿಯಾಗಿ ಕಗ್ಗಂಟು ನಾ ಬಿಡಿಸುವೆ.. ಚಿತ್ತಚಾರಿ  ಚರಿತ್ರೆಯಲಿ ಚಂದ್ರಕಿಯ ಚಮತ್ಕಾರದಲಿ ಚೈತನ್ಯದ ಚಿಲುಮೆಯಾಗಿ ಚಂದ್ರಜ್ಯೋತಿಯಾಗುವಾಸೆ.. ಬಾಲಾತಾಪ ಬಾನಿನಲಿ ಬಿಂದಲದ ಬೆಡಗಿನಲಿ ಬಕುಳದ    ಭಗವಾಗಿ ಝೇಂಕರಿಪ ಭೃಂಗವಾಗುವಾಸೆ.. ವತ್ಸಲದ ವನಧಿಯಲಿ ವರ್ಣದ ವರ್ಷಣದಲಿ ವಿಭಾಸಿ ವಾಜಿಯಾಗಿ ವಿಹಂಗಮಿಸುವಾಸೆ... ಸತ್ಕುಲದ ಸುಕೃತಿಯಲಿ ಸತ್ಕೀರ್ತಿಯ ಸರಿತ್ತಿನಲಿ ಸ್ವಚ್ಛಂದ ಸ್ಫೂರ್ತಿಯಾಗಿ ಸ್ವಪ್ನಸ್ಪರ್ಶಕೆ ಸಹಿಯಿಡುವೆ ..

ಗುಪ್ತಚರ

ಹೆತ್ತು ಹೊತ್ತು, ಸಾಕಿದ ಮಗನನ್ನು ಸಮಾಜ ಹಾಡಿಹೊಗಳುವಂತೆ  ಬೆಳೆಸಬೇಕು ಎಂದುಕೊಂಡಿದ್ದ ತಂದೆಗೆ, ಮಗ ಭಾರತೀಯ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ ಸೇರಬೇಕು ಎಂದುಕೊಂಡ‌ ವಿಷಯ ಮೈಬೆವರಿಳಿಸಿತು. ಮುಂದೊಂದು ದಿನ ಇಡೀ ವಿಶ್ವವೇ ಹಾಡಿಹೊಗಳಬಹುದೇನೋ! ಆದರೆ ಅಲ್ಲಿಯವರೆಗೆ ಭಯದ ಕರಿನೆರಳಲ್ಲೇ ಬದುಕಬೇಕು. ಮಗ ನಿರ್ಧರಿಸಿಯಾಗಿತ್ತು. ಏನು ಮಾಡಲಾದೀತು! ಅಲ್ಲದೇ, ಭಾರತಮಾತೆಯ ಸೇವೆಯನ್ನು ಯಾರಾದರೂ ನಿರಾಕರಿಸಲಾದೀತೇ! ಗೂಢಚಾರಿಕೆ ಸುಲಭದ ಮಾತಲ್ಲ. ಅದಕ್ಕೆ ತಮ್ಮ ಅಸ್ತಿತ್ವವನ್ನೇ ಮರೆತ, ಕ್ರಿಯಾಶೀಲ, ಸೂಕ್ಷ್ಮ ಮನಸ್ಥಿತಿಯ, ಬುದ್ಧಿವಂತರ ಅಗತ್ಯವಿರುತ್ತದೆ. ಎಲ್ಲವನ್ನೂ ಅರಿತಿದ್ದ ಮಗ ಸುಹಾಸ್ ದೊಡ್ಡದೊಂದು ನಿರ್ಧಾರಕ್ಕೆ ಬಂದಿದ್ದ. ಹೆತ್ತವರ ಬಳಿ, ತಾನು ಭಾರತೀಯ ಗೂಢಚಾರ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವಿಷಯ ಯಾರಿಗೂ ತಿಳಿಯಬಾರದು , ಅದರಿಂದ ನಿಮಗೂ ತೊಂದರೆ, ನನ್ನ ಕೆಲಸಕ್ಕೂ ತೊಂದರೆ. ಆದ್ದರಿಂದ ನಾನು ಸತ್ತಿದ್ದೇನೆಂದು ಎಲ್ಲರಿಗೂ ತಿಳಿಸಿ ಎಂದ. ಹೆತ್ತವರಿಗೆ ಸಿಡಿಲೇ ಬಡಿದಂತಾಗಿತ್ತು. ತಾಯಿಯ ಕಣ್ಣೀರಿಗೆ ಕೊನೆಯೇ ಇರಲಿಲ್ಲ. ಆದರೆ ಮಗನ ದೇಶಸೇವೆಗೆ ಅಡ್ಡಿ ಮಾಡಬಾರದು ಎಂದು ಮಗ ಹೇಳಿದಂತೆಯೇ ಅವನು ಅಪಘಾತದಲ್ಲಿ ಸತ್ತನೆಂದು ತಿಳಿಸಿ, ನಾಲ್ಕೈದು ದಿನಗಳು ಪರ ಊರಿಗೆ ಹೋಗಿ ಬಂದರು. ಕುಟುಂಬದವರು, ಸುತ್ತಮುತ್ತಲಿನವರು ಸಮಾಧಾನ ಮಾಡಲೋಸುಗ ಮನೆಗೆ ಬರಲಾರಂಭಿಸಿದರು. ಒಬ್ಬೊಬ್ಬರ ಸಮಾಧಾನ ಮಾಡುವಂತ, ದುಃಖವನ್ನು ಇಮ್ಮಡಿಗೊಳಿಸುವ ಮಾತುಗಳು ಹೆ

ಸಣ್ಣ ಕಥೆ-೧

  ನೆನಪಿನ ಮೆಲುಕು ದಿವ್ಯ, ಭವ್ಯ ಆತ್ಮೀಯ ಗೆಳತಿಯರು. ಅವರ ಸ್ನೇಹವು ಎಷ್ಟಿತ್ತೆಂದರೆ, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು! ಇಬ್ಬರೂ ಬುದ್ಧಿವಂತರಾದರೂ, ದಿವ್ಯಳ ಅಂಕ ಭವ್ಯಳಿಗಿಂತ ಹೆಚ್ಚಿರುತ್ತಿತ್ತು. ಭವ್ಯ ಎಂದೂ ಅಸೂಯೆ ಪಟ್ಟವಳಲ್ಲ. ಆದರೆ ಕೊನೆಯ ವಾರ್ಷಿಕ ಪರೀಕ್ಷೆಯಲ್ಲಿ ಭವ್ಯಳ ಅಂಕ ದಿವ್ಯಳಿಗಿಂತ ಜಾಸ್ತಿಯಿತ್ತು. ಈರ್ಷ್ಯೆ ಪಟ್ಟ ದಿವ್ಯ, ಅಂದಿನಿಂದ ಮಾತನಾಡುವುದನ್ನೇ ನಿಲ್ಲಿಸಿದಳು. ಭವ್ಯಳಿಗೆ ಕಾರಣ ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಾತನಾಡಲು ಯತ್ನಿಸಿ, ಸೋತು, "ಸ್ನೇಹವು ಪ್ರೀತಿ, ನಂಬಿಕೆಯನ್ನೊಳಗೊಂಡಿರಬೇಕೇ ಹೊರತು, ಅಸೂಯೆಯನ್ನಲ್ಲ" ಎಂದರಿತು ಸುಮ್ಮನಾದಳು. ಈಗಲೂ ಜೇಡ ಕಟ್ಟಿದ ಮೂಲೆಯಿಂದ ಕಳೆದ ಕ್ಷಣಗಳು, ನೆನಪುಗಳು ಇಣುಕಿ ಇಣುಕಿ ಅಪಹಾಸ್ಯ ಮಾಡುತ್ತಲೇ ಇವೆ.