ಸಣ್ಣ ಕಥೆ- ೩


ದೇಶಪ್ರೇಮ!



ಸಾವಿತ್ರಮ್ಮ ಹಾಗೂ ವಾಸುದೇವರಿಬ್ಬರಿಗೂ ದೇಶದ ಮೇಲೆ ಅಪಾರ ಗೌರವ. ಅವರ ಏಕೈಕ ಪುತ್ರ ಕಿರಣ್. ಬಾಲ್ಯದಿಂದಲೇ ಅವನಲ್ಲೂ ದೇಶಾಭಿಮಾನ ಮೂಡಿಸಿ, ಆತ ಸೇನೆಗೆ ಸೇರಲು ಕಾರಣವಾಗಿದ್ದು ಇವರೇ. ಅನೇಕ ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿದ ಮಗ ಕಿರಣ್ಗೆ ಮದುವೆ ಮಾಡಬೇಕೆಂದು ತೀರ್ಮಾನಿಸಿದರು. ಮದುವೆ ಆಯಿತು. ಆತನ ಪತ್ನಿ ರಮ್ಯಾ ಗರ್ಭಿಣಿಯಾದಳು. ಸೇನೆಯಿಂದ ಕರೆ ಬಂದ ನಿಮಿತ್ತ, ಕಿರಣ್ ಮತ್ತೆ ದೇಶದ ಸೇವೆಗಾಗಿ ತೆರಳಿದ. ಹತ್ತಾರು ಆಸೆಗಳನ್ನು ಹೊತ್ತು, ಪತಿಯ ಭಾವಚಿತ್ರ ಹಿಡಿದು, ಹಗಲುಗನಸು ಕಾಣುತ್ತಿದ್ದಳು. ನವ ಮಾಸ ತುಂಬಿ, ಹಡೆದು, ಗಂಡು ಮಗುವನ್ನು ಮಡಿಲಲ್ಲಿ ಹಿಡಿದಿದ್ದಳಾಕೆ. ಮನೆಯಲ್ಲಿ ಸಂತಸದ ವಾತಾವರಣ. ಹಲವಾರು ವರ್ಷಗಳ ನಂತರ ಸಿಕ್ಕ ಸಂಭ್ರಮವದು. ಮನೆಯವರು ವಿಷಯವನ್ನು ತಿಳಿಸಿದ್ದರೂ, ಕಿರಣ್ಗೆ ತುರ್ತು ಕಾರ್ಯದ ನಿಮಿತ್ತ ಬರಲಾಗಲಿಲ್ಲ. ಎಲ್ಲರೂ ಸಂಭ್ರಮಾಚರಣೆಯಲ್ಲಿರುವಾಗಲೇ ಕರೆ ಬಂದಿತು. ಗಡಿಯಲ್ಲಿ ಆದ ಆಕ್ರಮಣದಲ್ಲಿ ಕಿರಣ್ ಹೋರಾಡಿ, ವೀರಮರಣ ಹೊಂದಿದ್ದ. ಸಂತಸದ ಕ್ಷಣಕೆ ವಿಧಿ ಕಪ್ಪು ಚುಕ್ಕೆ ಇಟ್ಟಿತ್ತು. ಮೊಮ್ಮಗನ ಜನನದಿಂದ ಖುಷಿ ಪಡಬೇಕೋ, ಮಗ ನಿಧನ ಹೊಂದಿದ ಎಂದು ದುಃಖ ಪಡಬೇಕೋ, ಶತ್ರುಗಳ ವಿರುದ್ಧ ಹೋರಾಡಿ, ತನ್ನ ದೇಶವನ್ನು ಗೆಲ್ಲಿಸಿ, ಮರಣ ಹೊಂದಿದ ಎಂದು ಹೆಮ್ಮೆ ಪಡಬೇಕೋ ತಿಳಿಯದೆ ವಾಸುದೇವ ದಂಪತಿಗಳು ಮೌನಕ್ಕೆ ಜಾರಿದರು. ಇತ್ತ ಏನೂ ಅರಿಯದ ಕಂದಮ್ಮ, ಅಮ್ಮನ ಮಡಿಲಲ್ಲಿ ಕಿಲಕಿಲನೆ ನಗುತ್ತಾ ಆಡುತ್ತಿತ್ತು. ಅದನ್ನು ನೋಡಿ, ತನ್ನ ಮಗನನ್ನೂ ಮುಂದೆ ಸೇನೆಗೆ ಸೇರಿಸಲು ಅದಾಗಲೇ ಪಣ ತೊಟ್ಟಿದ್ದಳು, ದುಃಖದ ಮಡುವಿನಲ್ಲಿ ಮುಳುಗಿದ್ದ ರಮ್ಯಾ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..